ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆಂದು ಕಳೆದ ಹಲವು ದಿನಗಳಿಂದ ಸತತ ದಾಖಲೆ ಸಹಿತ ವರದಿ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕನ್ನಡದ ಸುದ್ದಿ ಮಾಧ್ಯಮ ಪವರ್ ಟಿವಿ ಸದ್ಯ ಬಂದ್ ಆಗಿದೆ. ಪವರ್ ಟಿವಿ ಮುಖ್ಯಸ್ಥರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಅಲ್ಲದೇ ಪವರ್ ಟಿವಿಯ ಪ್ರಿನ್ಸಿಪಲ್ ಎಡಿಟರ್ ರಹಮಾನ್ ಹಾಸನ್ ಅವರನ್ನು ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ವಿಚಾರಣೆ ನೆಪದಲ್ಲಿ ನಮ್ಮ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ.ಕೊರಿಯರ್ ಬಾಯ್ ಎಂದುಕೊಂಡು ಬಂದು ಪೋಲೀಸರು ದಾಳಿ ಮಾಡಿದ್ದಾರೆ.ಯಾವುದೇ ವಾರೆಂಟ್ ಇಲ್ಲದೆ ದಾಳಿ ಮಾಡಿದ್ದು ದಾಖಲೆ ಕೇಳಿದಾಗ ಕೈ ಬರಹ ದ ಮೂಲಕ ವಾರಂಟ್ ನೀಡಿದ್ದಾರೆ. ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪವರ್ ಟಿವಿ ಆರೋಪಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರಕಾರದ ನಡೆಗೆ ರಾಜ್ಯದೆಲ್ಲೆಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದೆ.ನೇರ ಮತ್ತು ಪಕ್ಷಪಾತವಿಲ್ಲದ ಸತ್ಯ ಸುದ್ದಿ ಪ್ರಕಟಿಸುವ ಪವರ್ ಟಿವಿ ಸುದ್ದಿ ಮಾಧ್ಯಮ ರಾಜ್ಯದಲ್ಲಿ ಅಪಾರ ಜನಬೆಂಬಲವನ್ನು ಪಡೆದಿದೆ.

ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸುದ್ದಿ ಮಾಡಿದರೆ, ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದರೆ ಸರ್ಕಾರ ಈ ರೀತಿ ಪೊಲೀಸರಿಂದ ದಾಳಿ ಸೇಡು ತೀರಿಸಿಕೊಳ್ಳುವ ಮಟ್ಟಕ್ಕೆ ಇಳಿದಿದೆ. ಪವರ್ ಟಿವಿ ತಾನು ಮಾಡಿದ ಆರೋಪಗಳಿಗೆ ದಾಖಲೆ ಒದಗಿಸಿದೆ.ಸಿ.ಎಂ ಪುತ್ರ ವಿಜಯೇಂದ್ರ ನ ವಿರುದ್ಧ ಕೇಸು ದಾಖಲಿಸಿದರೂ ಇದುವೆರಗೂ ಯಾವುದೇ ಎಫ್ಐರ್ ಆಗಿಲ್ಲ.ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದ ಬಗ್ಗೆ ಆರೋಪ ಇದ್ದು ಸರಕಾರದ ಮತ್ತು ಸಿಎಂ ಯಡಿಯೂರಪ್ಪ ನ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ.