ಮಂಗಳೂರು: ಹಿಜಾಬ್ ವಿವಾದ ಇದೀಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಬಾರಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಹಿಜಾಬ್ ಪರವಾಗಿ ದೊಡ್ಡ ಮಟ್ಟದಲ್ಲಿ ತಮ್ಮ ಧ್ವನಿ ಎತ್ತುತ್ತಿದ್ದಾರೆ.
ಆದರೆ ಪಕ್ಷದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಎನ್ನಲಾದ ಸುರಯ್ಯ ಅಂಜುಮ್ ಎಂಬವರು ಈ ಬಗ್ಗೆ ಫೇಸ್ಬುಕ್ ಲೈವ್ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಪಾಲಿಸಬೇಕು, ಹಿಜಾಬ್ ಧರಿಸುವ ಅವಶ್ಯಕತೆ ಇಲ್ಲ ಎಂಬ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದು ಸಹಜವಾಗಿ ಕಾರ್ಯಕರ್ತರಿಗೆ ಬಾರಿ ಮುಜುಗರ ತಂದಿದೆ ಎನ್ನಲಾಗಿದೆ.
ಇದೀಗ ಈ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬಾರಿ ವಿರೋಧ ವ್ಯಕ್ತವಾಗಿದ್ದು, ಕೂಡಲೇ ಅವರನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಅಂಜುಮ್ ವಿರುದ್ಧ ಪಕ್ಷ ಸೂಕ್ತವಾದ ಕ್ರಮ ಕೈಗೊಳ್ಳದೆ ಹೋದಲ್ಲಿ ಪಕ್ಷಕ್ಕೆ ಸಾಮೂಹಿಕವಾಗಿ ರಾಜಿನಾಮೆ ನೀಡುವ ಎಚ್ಚರಿಕೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ನೇರವಾಗಿ ನಾಯಕರಿಗೆ ತಲುಪಿಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಹಲವು ಬಾರಿ ಸುರಯ್ಯ ಅಂಜುಮ್ ಅವರು ಇದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪರವಾಗಿ ಸಕ್ರಿಯವಾಗಿ ಧ್ವನಿ ಎತ್ತುವ ಕಾರ್ಯಕರ್ತರಿಗೆ ಮುಜುಗರ ತಂದಿದ್ದರು ಎಂದು ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗಾಗಲೇ ಕಾಂಗ್ರೆಸ್ ಪಕ್ಷದ ವಿಧ್ಯಾರ್ಥಿ ಘಟಕವಾದ NSUI ರಾಜ್ಯ ಘಟಕ ಹಿಜಾಬ್ ಪರವಾಗಿ ಕಾನೂನಾತ್ಮಕ ಹೋರಾಟ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.