Latest Posts

ಬಾಬರಿ ಮಸೀದಿ ಧ್ವಂಸ ಪ್ರಕರಣ: ಸೆಪ್ಟೆಂಬರ್ 30ಕ್ಕೆ ಅಂತಿಮ ತೀರ್ಪು

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಲು ಸುಪ್ರೀಂ ಕೋರ್ಟ್  ಸೆಪ್ಟೆಂಬರ್ 30 ರವರೆಗೆ ಗಡುವು ನೀಡಿದೆ ಎಂದು ಎನ್‌ ಡಿ ಟಿ ವಿ ವರದಿ ಮಾಡಿದೆ.

ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯವು ವಿಚಾರಣೆಯನ್ನು ಪೂರ್ಣಗೊಳಿಸಿ, ಸೆಪ್ಟೆಂಬರ್ 30 ರೊಳಗೆ ತನ್ನ ತೀರ್ಪನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

2017 ರಲ್ಲಿ, ಉನ್ನತ ನ್ಯಾಯಾಲಯವು ವಿಚಾರಣಾ ನ್ಯಾಯಾಲಯಕ್ಕೆ ದಿನನಿತ್ಯದ ವಿಚಾರಣೆಗಳನ್ನು ನಡೆಸಿ, ಎರಡು ವರ್ಷಗಳಲ್ಲಿ ವಿಚಾರಣೆಯನ್ನು ಮುಗಿಸಲು ನಿರ್ದೇಶಿಸಿತ್ತು. ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ್ ಅವರ ಮನವಿಯ ನಂತರ ಒಂದು ತಿಂಗಳ ವಿಸ್ತರಣೆಯನ್ನು ಸಹ ನೀಡಲಾಯಿತು.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಜುಲೈ 24 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಎಂಎಂ ಜೋಶಿ ಜುಲೈ 23 ರಂದು ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಆಗಸ್ಟ್ 4 ರಂದು ನಡೆದ ಪ್ರಕರಣದ ವಿಚಾರಣೆಯಲ್ಲಿ, ಅಡ್ವಾಣಿ ಮತ್ತು ಜೋಶಿ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.

ರಾಷ್ಟ್ರೀಯ ಮಾಧ್ಯಮ ವರದಿಗಾರನೊಂದಿಗೆ ಮಾತನಾಡಿದ ಬಿಜೆಪಿ ಮುಖಂಡೆ ಉಮಾ ಭಾರತಿ, “ಹೇಳಿಕೆ ದಾಖಲಿಸುವುದಕ್ಕಾಗಿ ನನ್ನನ್ನು ನ್ಯಾಯಾಲಯ ಕರೆದಿದೆ. ನಿಜ ಏನು ಎಂದು ನಾನು ನ್ಯಾಯಾಲಯಕ್ಕೆ ಹೇಳಿದ್ದೇನೆ. ತೀರ್ಪು ಏನೆಂಬುದು ನನಗೆ ಅಪ್ರಸ್ತುತ ಮತ್ತು ಅದರ ಬಗ್ಗೆ ನನಗೆ ಆತಂಕವಿಲ್ಲ” ಎಂದು ಹೇಳಿದರು.

1992 ರಲ್ಲಿ ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾದ ಪಿತೂರಿ ನಡೆಸಿದ್ದರು ಎಂಬ ಆರೋಪ ಹೊತ್ತಿರುವ ಬಿಜೆಪಿ ನಾಯಕರಲ್ಲಿ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ಸೇರಿದ್ದಾರೆ.