Latest Posts

ಹೈದರಲೀ ಶಿಹಾಬ್ ತಂಙಳ್ ನಿಧನ – ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಹಾಗೂ ಅಧೀನ ಸಮಿತಿಗಳಿಂದ ತೀವೃ ಸಂತಾಪ

ದುಬೈ : ಸಮಸ್ತ ಕೇರಳ ಜಮೀಯತುಲ್ ಉಲೆಮಾ ಉಪಾಧ್ಯಕ್ಷರು, ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷರು, ಚಂದ್ರಿಕಾ ದೈನಿಕದ ಆಡಳಿತ ನಿರ್ದೇಶಕರು, ಸಾವಿರಾರು ಮೊಹಲ್ಲಾಗಳ ಖಾಝಿಯಾಗಿ, ಹೆಚ್ಚಿನ ಧಾರ್ಮಿಕ ಮತ್ತು ಭೌತಿಕ ಕಾಲೇಜುಗಳು ಮತ್ತು ಅನಾಥಾಶ್ರಮಗಳ ನೇತೃತ್ವ ವಹಿಸಿದ್ದ ಸೈಯ್ಯದ್ ಹೈದರ್ ಅಲಿ ಶಿಹಾಬ್ ತಂಙಳ್ ಅವರು ಮಾರ್ಚ್ 6 ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಅಂಗಮಾಲಿ ಲಿಟ್ಲ್ ಫ್ಲವರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಅಲ್ಪ ಕಾಲದ ಆಸೌಖ್ಯದಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು.
ನೂರಾರು ಜವಾಬ್ದಾರಿಗಳೆಡೆಯಲ್ಲೂ ಸರಳ, ಆಡಂಬರ ರಹಿತ ವ್ಯಕ್ತಿತ್ವದೊಂದಿಗೆ ಮುಸ್ಲಿಂ ಸಮುದಾಯಕ್ಕೆ ಪ್ರಬುದ್ಧ ನಾಯಕತ್ವ ನೀಡಿದ್ದ ಅವರು ದೇಶದ ಬಹುತ್ವ, ಸಾಮರಸ್ಯವನ್ನು ಬಹಳ ಗೌರವಿಸಿದ್ದರು. ಜನ ನೇತಾರರಿಗೆ ಮಾದರಿಯಾಗಿದ್ದ ಕೇರಳ ಪಾಣಕ್ಕಾಡ್ ಮನೆತನದ ಕುಡಿ ಕರ್ನಾಟಕ ಸಹಿತ ದೇಶದ ಹಲವು ಪ್ರದೇಶದ ಮುಸ್ಲಿಂ ಹಾಗೂ ಮುಸ್ಲಿಮೇತರ ನಾಯಕರೊಂದಿಗೆ, ಜನ ಸಾಮಾನ್ಯರೊಂದಿಗೆ ಕೂಡ ಅವಿನವ ಭಾವ ಸಂಬಂಧವನ್ನು ಹೊಂದಿದ್ದರು.

ಸೈಯ್ಯದ್ ಹೈದರ್ ಅಲಿ ಶಿಹಾಬ್ ತಂಙಳ್ ಅವರ ವಿಯೋಗಕ್ಕೆ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷರಾದ ಸೈಯ್ಯದ್ ಆಸ್ಕರ್ ಅಲಿ ತಂಙಳ್ ಮತ್ತು ಅಧೀನ ಸಮಿತಿಗಳ ಪ್ರಮುಖರು ಅಗಾಧ ದುಃಖವನ್ನು ವ್ಯಕ್ತಪಡಿಸಿ ಸಂತಾಪವನ್ನು ಸೂಚಿಸುವುದರೊಂದಿಗೆ ಮೃತರ ಮೇಲೆ ಎಲ್ಲಾ ದೀನಿ ಸಹೃದಯರು ಮಯ್ಯಿತ್ ನಮಾಝ್ ಮತ್ತು ವಿಶೇಷ ದುಆ ಕಾರ್ಯವನ್ನು ನೆರವೇರಿಸಬೇಕೆಂದು ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.