ಮಂಗಳೂರು: ವಿಶ್ವವಿದ್ಯಾನಿಲಯದ ಶಿರವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ಸುಳ್ಳು ಹೇಳಿಕೆ ಅಚ್ಚರಿ ಹಾಗೂ ಮನಸ್ಸಿಗೆ ನೋವು ತಂದಿದೆ. ಈ ಸುಳ್ಳು ಹೇಳಿಕೆಗಳು ದುರುದ್ದೇಶದಿಂದ ಕೂಡಿದ ರಾಜಕೀಯ ಪ್ರೇರಿತವಾಗಿದ್ದು ವಿದ್ಯಾರ್ಥಿನಿಯರ ಹಿಂದೆ ಕಾಣದ ಕೈಗಳ ಕುಮ್ಮಕ್ಕು ಎದ್ದು ಕಾಣುತ್ತಿದೆಯೆಂದು ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.
ಈ ವಿವಾದಕ್ಕೆ ಸಂಬಂಧಿಸಿದಂತೆ ದಿನಾಂಕ *18-05-2022* ರಂದು ವಿದ್ಯಾರ್ಥಿನಿಯರೋರ್ವರು ನನಗೆ ಕರೆ ಮಾಡಿ, ಕಳೆದ ಬಾರಿ ರಾಜ್ಯದಾದ್ಯಂತ ಹಿಜಾಬ್ ವಿವಾದ ಇದ್ದಾಗಲೂ ಕೂಡಾ ನಮ್ಮ ಕಾಲೇಜಿನ ಕ್ಯಾಲೆಂಡರಿನಲ್ಲಿ ವಸ್ತ್ರದೊಂದಿಗೆ ಹಿಜಾಬ್ ಹಾಕಲು ನಿಯಮ ಇದ್ದ ಕಾರಣ ನಮಗೆ ಯಾರಿಗೂ ತೊಂದರೆಯಾಗಿರಲಿಲ್ಲ. ಇದೀಗ ಈ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಠಾತ್ತನೆ ಹಿಜಾಬ್ ಹಾಕಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಉಪಕುಲಪತಿಗಳ ಬಳಿ ವಿಚಾರ ಕೇಳಿದಾಗ ಸಿಂಡಿಕೇಟ್ ಸಮಿತಿಯ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ, ನೀವು ಜಿಲ್ಲಾಧಿಕಾರಿಗಳ ಬಳಿಗೆ ಹೋಗಿ, ಈ ನಿಯಮ ಪಿ.ಯು.ಕಾಲೇಜುಗಳಿಗೆ ಮಾತ್ರ ಅನ್ವಯ ಡಿಗ್ರಿ ಕಾಲೇಜಿಗೆ ಅನ್ವಯಿಸುವುದಿಲ್ಲ ಎಂಬ ಆದೇಶ ನೀಡಿದರೆ ನನಗೆ ನಿಮ್ಮನ್ನು ಸಹಾಯ ಮಾಡಬಹುದು ಎಂದು ತಿಳಿಸಿರುತ್ತಾರೆ, ಹಾಗಾಗಿ ಈಗ ನಾವು ಜಿಲ್ಲಾಧಿಕಾರಿಗಳ ಕಛೇರಿಗೆ ಬಂದಿದ್ದೇವೆ, ತಾವು ಬಂದರೆ ಒಳ್ಳೆಯದಿತ್ತು ಎಂಬುದಾಗಿ ಕೇಳಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ನಾನು ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ನನಗೆ ಬರಲು ಅನಾನುಕೂಲ ಆಗಬಹುದು, ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಅವರ ಯಾವ ಸಮಯದಲ್ಲಿ ಸಿಗುತ್ತಾರೆಂಬುದನ್ನು ಕೇಳಿ ನಿಮಗೆ ತಿಳಿಸುತ್ತೇನೆಂದು ಹೇಳಿದೆ. ನಂತರ ತಕ್ಷಣ ನಾನು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ ಜಿಲ್ಲಾಧಿಕಾರಿಗಳು ಈಗ ಕಛೇರಿಯಲ್ಲಿ ಇಲ್ಲ, ಸಂಜೆ 4 ಗಂಟೆಗೆ ಬರಲಿ ಎಂದು ತಿಳಿಸುತ್ತಾರೆ. ತಕ್ಷಣ ನಾನು ನನಗೆ ಕರೆ ಮಾಡಿದ ವಿದ್ಯಾರ್ಥಿನಿಗೆ ಮರು ಕರೆ ಮಾಡಿ ಜಿಲ್ಲಾಧಿಕಾರಿಗೆ ಮಾತನಾಡಿ ಘಟನೆಯ ಬಗ್ಗೆ ವಿವರಿಸಿದ್ದೇನೆ, ಅವರು ಕಛೇರಿಯಲ್ಲಿ ಇಲ್ಲದ ಕಾರಣಕ್ಕಾಗಿ ಸಂಜೆ ನಾಲ್ಕು ಘಂಟೆಗೆ ಬರಲು ತಿಳಿಸಿರುತ್ತಾರೆ, ಹೋಗಿ ಮಾತನಾಡಿ ಎಂದು ವಿದ್ಯಾರ್ಥಿನಿಗೆ ಹೇಳಿದೆ. ಆದರೆ ಸ್ವಲ್ಪ ಸಮಯದ ನಂತರ ನನಗೆ ಪುನಹ ಕರೆ ಮಾಡಿದ ಜಿಲ್ಲಾಧಿಕಾರಿಗಳು ಪ್ರಾಕೃತಿಕ ವಿಕೋಪದ ಸಭೆಯಲ್ಲಿರುವುದರಿಂದ ನನಗೆ 4 ಗಂಟೆಗೆ ಸಿಗಲು ಅಸಾಧ್ಯವಾಗಬಹುದು, ಆದುದರಿಂದ ನಾಳೆ ಬೆಳಗ್ಗೆ 10 ಗಂಟೆಗೆ ಕೊಟ್ಟಾರ ಜಿಲ್ಲಾ ಪಂಚಾಯತ್ ಗೆ ಬರಲಿ ಎಂದು ತಿಳಿಸಿದಾಗ ನಾನು ಪುನಹ ವಿದ್ಯಾರ್ಥಿನಿಗೆ ಕರೆ ಮಾಡಿ ಜಿಲ್ಲಾಧಿಕಾರಿಗಳು ನಾಳೆ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಕಛೇರಿಗೆ ಬರಲು ಹೇಳಿದ್ದಾರೆ, ನನಗೆ ನಾಳೆ ಆ ಸಮಯದಲ್ಲಿ ಪೂರ್ವ ನಿಗದಿಯಾದಂತೆ ಪಾಣೇಲ ಬಸ್ಸು ಉದ್ಘಾಟನಾ ಕಾರ್ಯಕ್ರಮ ಹಾಗೂ ನಂತರ ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಹರಿಪ್ರಸಾದ್ ರವರು ಜಿಲ್ಲೆಗೆ ಭೇಟಿ ನೀಡುವುದರಿಂದ ಬರಲು ಅಸಾಧ್ಯವಿದೆ,ನಾನು ಮಾಜಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ, ದ.ಕ.ಜಿಲ್ಲಾ ಕಾಂಗ್ರೆಸ್
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ರವರನ್ನು ನಿಮ್ಮೊಂದಿಗೆ ಕಳುಹಿಸುತ್ತೇನೆಂದು ಹೇಳಿ ವಿದ್ಯಾರ್ಥಿನಿಗೆ ಶಾಹುಲ್ ರವರ ನಂಬರನ್ನು ನೀಡಿದೆ.
ಮರುದಿನ ಶಾಹುಲ್ ಹಮೀದ್ ರವರು ವಿದ್ಯಾರ್ಥಿಗಳೊಂದಿಗೆ ತೆರಳಿ ಜಿಲ್ಲಾಧಿಕಾರಿಗಳ ಬಳಿ ಘಟನೆಯ ಬಗ್ಗೆ ವಿವರಿಸುತ್ತಾರೆ. ಅಂತೆಯೇ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸುತ್ತೇನೆಂಬ ಭರವಸೆಯನ್ನು ನೀಡಿದ್ದಾರೆ. ಈ ಮದ್ಯೆ ನಾನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿ ಕಾಲೇಜಿನ ಕ್ಯಾಲೆಂಡರ್ ನಲ್ಲಿದ್ದಂತೆ ವಿದ್ಯಾರ್ಥಿಗಳು ವಸ್ತ್ರದ ಜತೆಯಲ್ಲಿ ಶಿರವಸ್ತ್ರ ಹಾಕಿಕೊಂಡು ಬರುವುದಕ್ಕೆ ಯಾಕೆ ತಡೆಯೊಡ್ಡಿದ್ದೀರಿ? ಎಂದು ಪ್ರಶ್ನಿಸಿದಾಗ ಅವರು ಇದು ಯುನಿವರ್ಸಿಟಿಯ ಬಂದ ಆದೇಶ, ಅದನ್ನು ನಾವು ಅನುಷ್ಠಾನಗೊಳಿಸಿದ್ದೇವೆ ಅಷ್ಟೆ, ನಾವು ಏನು ಮಾಡಲೂ ಸಾಧ್ಯವಿಲ್ಲ ಎಂದು ಹೇಳಿದರು.
ನಂತರ ನಾನು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಿಗೂ ಕರೆ ಮಾಡಿ ಮೇಲೆ ತಿಳಿಸಿದ ಎಲ್ಲಾ ವಿಚಾರಗಳನ್ನು ವಿವರಿಸಿದಾಗ, ಉಪ ಕುಲಪತಿಗಳು ಇದು ಸಿಂಡಿಕೇಟ್ ಸಮಿತಿಯ ಬಹುಮತದ ತೀರ್ಮಾನದ ಮೇಲೆ ಈ ನಿರ್ಧಾರ ಮಾಡಲಾಗಿದೆಯೆಂಬ ಉತ್ತರ ಬಂತು. ಸಿಂಡಿಕೇಟ್ ಸಮಿತಿಯ ನಿರ್ಧಾರವಾದರೆ ಮತ್ಯಾಕೆ ತಾವು ವಿದ್ಯಾರ್ಥಿನಿಯರನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಅಲೆದಾಡಿಸುತ್ತೀರಿ, ಜಿಲ್ಲಾಧಿಕಾರಿಗಳ ಆದೇಶ ಇದ್ದರೆ ಸಮಸ್ಯೆ ಬಗೆಹರಿಯುತ್ತಾ ಕೇಳಿದಾಗ ಇಲ್ಲ ಎಂಬ ಉತ್ತರ ಉಪ ಕುಲಪತಿಗಳಿಂದ ಬಂತು.
ಈ ಮದ್ಯೆ ಜಿಲ್ಲಾಧಿಕಾರಿಗಳ ಭೇಟಿಯ ಬಳಿಕ ಕರೆ ಮಾಡಿದ್ದ ವಿದ್ಯಾರ್ಥಿನಿ ಜಿಲ್ಲಾಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ, ತಾವು ಹೇಗಾದರೂ ಮಾಡಿ ಜಿಲ್ಲಾಧಿಕಾರಿಗಳಿಂದ ಪದವಿ ಕಾಲೇಜಿಗೆ ಅನ್ವಯಿಸುವುದಿಲ್ಲವೆಂಬ ಲೆಟರ್ ತೆಗೆಸಿಕೊಡಿ ಎಂದು ಮನವಿ ಮಾಡಿದರು. ಆ ಸಂದರ್ಭದಲ್ಲಿ ನಾನು ಜಿಲ್ಲಾಧಿಕಾರಿಗಳು, ಉಪ ಕುಲಪತಿಗಳು ಹಾಗೂ ಪ್ರಾಂಶುಪಾಲರ ಬಳಿ ಚರ್ಚೆ ನಡೆಸಿದ ಎಲ್ಲಾ ವಿಚಾರಗಳನ್ನು ತಿಳಿಸಿ ಸದ್ಯಕ್ಕೆ ತಾವುಗಳು ಎಲ್ಲರೂ ತರಗತಿಗಳಿಗೆ ತೆರಳಿ ನಂತರ ಇದರ ಬಗ್ಗೆ ಕಾನೂನು ಹೋರಾಟ ನಡೆಸುವ,ಈಗ ಅಲ್ಲಿ ಇಲ್ಲಿ ಅಲೆದಾಡಿ ಹಾಜರಾತಿ ಕಡಿಮೆಯಾದರೆ ತಮ್ಮ ಶಿಕ್ಷಣಕ್ಕೆ ದಕ್ಕೆಯಾಗಬಹುದು, ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದು ಒಳಿತು ಎಂದು ತಿಳಿಸಿ,ಕಾನೂನು ಹೋರಾಟ ಕ್ಕಾಗಿ ಹೈಕೋರ್ಟ್ ಸೆಂಟ್ರಲ್ ಅಡ್ವಕೇಟ್ ಫೋರಂ ಶಾಹುಲ್ ಹಮೀದ್ ರವರ ನಂಬರನ್ನು ವಿದ್ಯಾರ್ಥಿನಿಯರಿಗೆ ನೀಡಿ ಅವರಲ್ಲಿ ಚರ್ಚಿಸಲು ತಿಳಿಸಿದೆ.
ನಂತರ ಪುನಹ ಮತ್ತೆ ಕರೆ ಮಾಡಿದ್ದ ವಿಧ್ಯಾರ್ಥಿಗಳು ಜಿಲ್ಲಾಧಿಕಾರಿಗಳು ಲೆಟರ್ ನೀಡುತ್ತಿಲ್ಲ ಎಂದು ಹೇಳಿದಾಗ, ನನ್ನ ಅನುಭವದ ಪ್ರಕಾರ ಇದು ಕಾನೂನು ಮತ್ತು ನ್ಯಾಯಾಲಯದ ಪರಿಮಿತಿಯಲ್ಲಿರುವುದರಿಂದ ನ್ಯಾಯಾಲಯದ ಮೊರೆ ಹೋಗುವುದು ಸೂಕ್ತ, ಈಗಾಗಲೇ ಕಾನೂನು ಹೋರಾಟದ ಬಗ್ಗೆ ಅಡ್ವಕೇಟ್ ಬಳಿ ವಿವರ ತಿಳಿಸಿದ್ದೇನೆ, ನಿಮಗೂ ಅಡ್ವಕೇಟ್ ನಂಬರ್ ನೀಡಿದ್ದೆ, ಅವರ ಬಳಿ ಚರ್ಚೆ ನಡೆಸಿದ್ದೀರಾ ಎಂದು ಕೇಳಿದಾಗ ಇಲ್ಲ ನ್ಯಾಯಾಲಯಕ್ಕೆ ಹೋಗಲು ಕೆಲವರಿಗೆ ಮನಸ್ಸಿಲ್ಲ ಎಂದು ವಿದ್ಯಾರ್ಥಿನಿ ತಿಳಿಸಿದರು. ಕಾನೂನು ಎಲ್ಲರಿಗೂ ಒಂದೇ, ನ್ಯಾಯಾಲಯಕ್ಕೆ ಹೋಗುವುದು ಸೂಕ್ತ ಎಂದು ತಿಳಿ ಹೇಳಿದಾಗ ಈ ಬಗ್ಗೆ ನಾವು ಪುನಹ ಚರ್ಚಿಸಿ ಮತ್ತೆ ತಿಳಿಸುತ್ತೇವೆ ಎಂದರು.
ಎರಡು ದಿನಗಳ ಬಳಿಕ ಮತ್ತೆ ನಾನು ಉಪ ಕುಲಪತಿಗಳಿಗೆ ಕರೆ ಮಾಡಿ ವಿಚಾರದ ಬಗ್ಗೆ ಕೇಳಿದಾಗ, ಕಾಲೇಜು ಪ್ರಾಂಶುಪಾಲರಿಗೆ ಅಲ್ಲಿನ ಅಭಿವೃದ್ಧಿ ಸಮಿತಿಯ ಸಭೆ ಕರೆದು ಈ ಶೈಕ್ಷಣಿಕ ವರ್ಷದಲ್ಲಿ ಹಿಂದಿನಂತೆಯೇ ಇರುವ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಎಂಬ ನಿರ್ಣಯ ಮಾಡಿ ಕಳಿಸಿಕೊಡಿ ಎಂದು ತಿಳಿಸಿದ್ದೇನೆ ಎಂದರು. ಈ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆಯಲು ಮತ್ತೆ ನಾನು ವಿದ್ಯಾರ್ಥಿನಿಯರಿಗೆ ಕಾಲ್ ಮಾಡಿದಾಗ ಕರೆಯನ್ನು ಸ್ವೀಕರಿಸಲಿಲ್ಲ, ನನ್ನ ಕಛೇರಿಯ ಅಪ್ತ ಸಹಾಯಕನ ಕರೆಯನ್ನು ಕೂಡಾ ಸ್ವೀಕರಿಸಿಲ್ಲ. ಮತ್ತೆ ನಾನೇ ಕರೆ ಮಾಡಿದಾಗ ನನ್ನ ಕರೆ ಸ್ವೀಕರಿಸಿದ ವಿದ್ಯಾರ್ಥಿನಿ ರಾಂಗ್ ನಂಬರ್ ಎಂದು ಕಾಲ್ ಕಟ್ ಮಾಡಿರುತ್ತಾರೆ. ನಂತರ ಈ ಬಗ್ಗೆ ಯಾರೂ ಕೂಡಾ ನನ್ನನ್ನು ಸಂಪರ್ಕಿಸಿಲ್ಲ,ಮತ್ತೆ ಜಿಲ್ಲಾಧಿಕಾರಿಗಳ ಭೇಟಿಗೆ ತೆರಳಿದ್ದೂ ತಿಳಿದಿಲ್ಲ. ಆ ದಿನ ನಾನು ಬೆಂಗಳೂರಿನಲ್ಲಿದ್ದ ಸಂದರ್ಭ ಮಾದ್ಯಮದ ಮೂಲಕ ಈ ವಿಚಾರ ತಿಳಿದು ಸರಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿವರಿಸಿ ಜಿಲ್ಲಾಧಿಕಾರಿಗಳು ಹಾಗೂ ಉಪ ಕುಲಪತಿಗಳ ಬಳಿ ಈ ಬಗ್ಗೆ ಚರ್ಚಿಸಿ ಗೊಂದಲ ಸರಿಪಡಿಸಬೇಕೆಂದು ಮನವಿ ಮಾಡಿದೆ.
ಇಷ್ಟೆಲ್ಲಾ ಬೆಳವಣಿಗೆ ಆಗಿದ್ದರೂ ಕೂಡಾ ಇದ್ಯಾವುದು ವಿಚಾರಗಳನ್ನು ತಿಳಿಸದೆ ವಿದ್ಯಾರ್ಥಿನಿಯರು ತಮ್ಮ ಈ ಪ್ರಾಯದಲ್ಲಿಯೇ ಯಾವುದೋ ರಾಜಕೀಯ ಶಕ್ತಿಗಳಿಗೆ ಮಣಿದು ಮಾದ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂದು ವಿವಾದದ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಯು.ಟಿ.ಖಾದರ್ ವಿಷಾದ ವ್ಯಕ್ತಪಡಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಶಿರವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ಹೇಳಿಕೆ ರಾಜಕೀಯ ಪ್ರೇರಿತ.!
ಸಹೋದರಿಯರ ಸುಳ್ಳು ಹೇಳಿಕೆಯು ಅಚ್ಚರಿ ಹಾಗೂ ಮನಸ್ಸಿಗೆ ನೋವು ತಂದಿದೆ: ಯು.ಟಿ.ಖಾದರ್
